Monday, March 9, 2009

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು



ಇತರ ಹಿಂದುಳಿದ ಜಾತಿಯವರಿಗೆ ವಿದ್ಯಾಸಂಸ್ಥೆಗಳಲ್ಲಿ ೨೭% ಮೀಸಲಾತಿ ನೀಡುವಂತಹ ಕಾನೂನನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುತ್ತಿದ್ದಂತೆಯೇ ಸಮಾನತೆ, ಗುಣಮಟ್ಟ ಇತ್ಯಾದಿಯ ಬಗೆಗಿನ ಚರ್ಚೆ ಮತ್ತೆ ಆರಂಭವಾಗಿದೆ. ಚರ್ಚೆಗೆ ಒಂದು ಸ್ಪಷ್ಟ ಉತ್ತರ ಸಿಗುವುದಾಗಿದ್ದರೆ ಇಷ್ಟು ಗೊಂದಲಮಯ ವಸ್ತುವೇ ಆಗುತ್ತಿರಲ್ಲ. ಇದರಿಂದಾಗಿ .ಬಿ.ಸಿಗಳಿಗೆ ಒಳಿತಾಗುವುದೇ? ಮೇಲ್ವರ್ಗದವರ ಅವಕಾಶಗಳು ಕಡಿಮೆಯಾಗುವುದೇ? ಎಲ್ಲರನ್ನೂ ಸಮಾನ ಮಾನದಂಡದ ಮೇಲೆ ಅಳೆಯುತ್ತಿದ್ದ ಸಿದ್ಧಾಂತಕ್ಕೆ ಧಕ್ಕೆ ಬಂದಿದೆಯೇ? ಎಲ್ಲ ಪ್ರಶ್ನೆಗಳೂ ಉದ್ಭವಿಸುತ್ತವೆ. ಜಟಿಲವಾದ ವಿಷಯದ ನಿರಚನೆ ಅಷ್ಟೇ ಜಟಿಲವಾದದ್ದು.

 

ಸರ್ವರಿಗೂ ಸಮಬಾಳು ಅನ್ನುವ ಮಾತು ಎಂದಿಗಾದರೂ ನಿಜವಾಗಲು ಸಾಧ್ಯವೇ? ನಾವು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಅಸಮಾನತೆ ಇದ್ದೇ ಇರುತ್ತದೆ. ಅಸಮಾನತೆಯ ಮೂಲ ಹುಟ್ಟಿನಿಂದ, ಪ್ರತಿಭೆಯಿಂದ, ಬದುಕುವ ಸಂದರ್ಭದಿಂದ, ನೈಸರ್ಗಿಕ ಕಾರಣಗಳಿಂದ, ಪ್ರಕೃತಿಯಿಂದ, ಹಾಗೂ ಮಾನವನಿರ್ಮಿತ ತೊಡಕುಗಳಿಂದಾಗಿ ಉಂಟಾಗುತ್ತದೆ. ಅಸಮಾನತೆಯ ಮೂಲವನ್ನು ಹುಡುಕುವುದು ಕಷ್ಟದ ಸಂಗತಿ. ಹಾಗೂ, ಅಸಮಾನತೆಯನ್ನು ಇಲ್ಲವಾಗಿಸಲು ನಮಗೆ ಎಂದೆಂದಿಗೂ ಸಾಧ್ಯವಿಲ್ಲವೆಂಬ ಸತ್ಯವನ್ನು ನಾವು ಗಮನಿಸುತ್ತಲೇ, ಅದನ್ನು ತುಸುವಾದರೂ ಕಡಿಮೆಗೊಳಿಸುವ ಯತ್ನಕ್ಕೆ ಕಂಕಣಬದ್ಧರಾಗಬೇಕಾಗಿದೆ. ಹೀಗಾಗಿ ಮೀಸಲಾತಿಯನ್ನು ಒಂದು ಪರಿಹಾರ ಎಂದು ನಂಬದೇ ಅದು ಒಂದು ಪ್ರಕ್ರಿಯೆ ಅನ್ನುವುದನ್ನು ನಾವು ಗಮನಿಸಿದರೆ ಆಗ ಅದರಲ್ಲಿ ಕಡಿಮೆ ಹುಳುಕುಗಳನ್ನು ನಾವು ಕಾಣಬಹುದು. ಅದೇ ಸಮಯಕ್ಕೆ ಸಮಾನತೆಯ, ಗುಣಮಟ್ಟದ ಮಾತನ್ನಾಡುವ ಜನರ ವಿಚಾರಗಳನ್ನೂ ನಾವು ಒಂದುಕಡೆ ಅರ್ಥಮಾಡಿಕೊಳ್ಳಬಹುದು, ಅವರ ಜೊತೆ ಸಂಭಾಷಣೆಯ ಪ್ರಕ್ರಿಯೆಗೆ ತೊಡಗಬಹುದು.

 

ಸರಕಾರದ ಮೀಸಲಾತಿಯ ನೀತಿಯಲ್ಲಿ ವಿರೋಧಾಭಾಸವಿರಬಹುದೇ? ಈಗಾಗಲೇ ಆರ್ಥಿಕವಾಗಿ ಮುಂದುವರೆದವರಿಗೆ [ಕೆನೆಪದರ?] ಮೀಸಲಾತಿ ವರ್ತಿಸಬೇಕೇ? ಹಿಂದುಳಿದವರು ಅನ್ನುವುದಕ್ಕೆ ಆರ್ಥಿಕ ಹಿಂದುಳಿಯುವಿಕೆ ಮೂಲವೋ, ಜಾತಿ ಆಧಾರಿತ ಸಾಮಾಜಿಕ ಹಿಂದುಳಿಯುವಿಕೆಯನ್ನು ನಾವು ಪರಿಗಣಿಸಬೇಕೋ? ಹೀಗೆ ಅನೇಕ ಪ್ರಶ್ನೆಗಳು ಏಳುತ್ತವೆ. ಯಾವ ಸ್ಥರದಲ್ಲಿ ಮೀಸಲಾತಿ ನಮಗೆ ಬೇಕಾಗಿದೆ? ಮೀಸಲಾತಿ ಎಲ್ಲಿ ನಿಲ್ಲಬೇಕು? ಇಂಥ ಪ್ರಶ್ನೆಗಳನ್ನೂ ನಾವು ನಮ್ಮಲ್ಲೇ ಕೇಳಿಕೊಳ್ಳಬೇಕಾಗುತ್ತದೆ. ಸಮಸ್ಯೆಯ ಮೂಲವಿರುವುದು ಎಲ್ಲರಿಗೂ ಸಮಾನಾವಕಾಶ ಇಲ್ಲದಿರುವ ಸತ್ಯದಲ್ಲಿ. ಸಮಾನಾವಕಾಶದ ಯುಟೋಪಿಯದ ಬೆನ್ನಟ್ಟಿ ನಾವು ಎಲ್ಲಿಯವರೆಗೆ ಪ್ರಯಾಣ ಮಾಡಬಹುದು?

 

ಒಂದು ಕ್ಷಣದ ಮಟ್ಟಿಗೆ ನಾವು ಶಿಕ್ಷಣ ಪದ್ಧತಿಯ ಆದಿಗೆ ಹೋಗೋಣ. ಪ್ರಾಥಮಿಕ ಶಾಲೆಯ ಮೊದಲನೆಯ ತರಗತಿಯಲ್ಲಿ ಮೀಸಲಾತಿ ಇರಬೇಕೆಂದು ಹೋರಾಡುವವರನ್ನು ನಾವು ಕಂಡಿದ್ದೇವೆಯೇ? ಪ್ರಾಥಮಿಕ ಶಾಲೆಯ ಮೊದಲ ತರಗತಿಗೆ ಮಕ್ಕಳನ್ನು ಸೇರಿಸುವಾಗ ಯಾವ ರೀತಿಯ ಭೇದ ಭಾವವನ್ನು ನೋಡಲು ಸಾಧ್ಯ? ಹಂತಕ್ಕೆ ಹೋದಾಗ ನಮಗೆ ವೇದ್ಯವಾಗುವುದು ಅಲ್ಲಿನ ಭೇದ ಭಾವವೆಲ್ಲ ಆರ್ಥಿಕ ಸಾಮಾಜಿಕ ಸ್ಥರಕ್ಕೆ ಸಂಬಂಧಿಸಿದ್ದು. ಶಾಲೆಗಳಲ್ಲಿ ನಡೆಸುವ ಮಕ್ಕಳ ಮತ್ತವರ ತಂದೆ ತಾಯಿಯರ ಸಂದರ್ಶನ ಮಗುವಿನ ಬುದ್ಧಿವಂತಿಕೆಗೆ ಸಂಬಂಧಿಸಿದ್ದಲ್ಲವೇ ಅಲ್ಲ. ಬದಲಿಗೆ ಸ್ಕೂಲಿನ ನೀತಿ ನಿಯಮಗಳಿಗೆ, ಅಲ್ಲಿ ಓದಲು ಆಗುವ ಖರ್ಚಿಗೆ, ಅಲ್ಲಿಗೆ ಬರುವ ಇತರ ಮಕ್ಕಳೊಂದಿಗೆ ಸಾಮಾಜಿಕವಾಗಿ ಹೊಂದಾಣಿಕೆಯಾಗಬಹುದೇ ಇಲ್ಲವೇ ಅನ್ನುವ ಅಂಶವನ್ನೇ ಸ್ಥರದಲ್ಲಿ ನೋಡುತ್ತಾರೆ. ಎಲ್ಲೋ ಹೈದರಾಬಾದ್ ಪಬ್ಲಿಕ್ ಸ್ಕೂಲ್ನಂತಹ ಕೆಲವು ಶಾಲೆಗಳಲ್ಲಿ ಲಾಟರಿ ಎತ್ತಿ ಮಕ್ಕಳಿಗೆ ಪ್ರಾಥಮಿಕ ಶಾಲೆಗೆ ಸೇರಿಸಿಕೊಳ್ಳುವ ಅಪವಾದವನ್ನು ಅಲ್ಲಿ, ಇಲ್ಲಿ ನೋಡಿದ್ದೇವೆ. ಅನಂತಮೂರ್ತಿಯವರು ಪ್ರತಿಪಾದಿಸುವ ನೈಬರ್ಹುಡ್ ಶಾಲೆಗಳ ವಾದಸರಣಿಯನ್ನು ಒಂದು ಮಟ್ಟಿಗೆ ನಾವು ಒಪ್ಪಲೇಬೇಕಾಗುತ್ತದೆ. ಆದರೆ ಉತ್ತಮ ಅವಕಾಶಗಳಿರುವ ನೈಬರ್ಹುಡ್ಗಳನ್ನು ಹುಡುಕಿ ಹೋಗುವ ಪ್ರಕ್ರಿಯೆಯೂ ತಕ್ಷಣ ಪ್ರಾರಂಭವಾಗುತ್ತದೆನ್ನುವುದನ್ನು ನಾವು ಗಮನಿಸಬೇಕು.

 

ಹಾಗಾದರೆ ಮೂಲದಲ್ಲೇ ಜನರಿಗೆ ಸಿಗುವ ಅವಕಾಶಗಳು ಮತ್ತು ಅನುಭವಗಳು ಭಿನ್ನ ಎಂದ ಹಾಗಾಯಿತು. ಹಾಗೆ ನೋಡಿದರೆ ಒಂದೇ ಶಾಲೆಗೆ ಸೇರಿ ಒಂದೇ ತರಗತಿಗೆ ಹೋದ ಎಲ್ಲರೂ ಒಂದೇ ಸಮನಾಗಿ ಕಲಿಯುತ್ತಾರೆ ಅನ್ನುವುದೂ ಸುಳ್ಳೇ ಅಲ್ಲವೇ? ಹುಟ್ಟಿನಿಂದ, ತಂದೆತಾಯಿಯರ ಆರ್ಥಿಕ ಸ್ಥರದಿಂದ ಲಭ್ಯವಾಗುವ ಅವಕಾಶ ಅನುಭವದಿಂದ ಒಂದು ಮಗುವಿನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಹೀಗಾಗಿ ಅಸಮಾನತೆಯನ್ನು ನಾವು ಮೂಲದಲ್ಲೇ ಒಪ್ಪಿ ಮುಂದುವರೆಯುತ್ತಿದ್ದೇವೆ ಅಂದಹಾಗಾಯಿತು. ಅಸಮಾನತೆಯು ಒಂದೇ ಹಿನ್ನೆಲೆಯಿಂದ ಬಂದ ವ್ಯಕ್ತಿಗಳಿಗೂ ಆಗಬಹುದು. ಹಿನ್ನೆಲೆಯಿಂದಾಗಿ, ಹಿನ್ನೆಲೆಯ ಪರಿಸ್ಥಿತಿಯಿಂದಾಗಿ ಒಂದು ಸ್ಥರದ, ಜಾತಿಯ, ಹಿನ್ನೆಲೆಯ ಜನ ಮುಂಬರುವ ಅವಕಾಶಗಳಿಂದ ವಂಚಿತರಾಗುವ ಸಾಧ್ಯತೆಯನ್ನು ನಾವು ಗುರುತಿಸಿದಲ್ಲಿ, ಮೀಸಲಾತಿಯನ್ನು ಹೀಗಾಗುವ ಏರುಪೇರುಗಳಿಗೆ ಕೊಡಬಹುದಾದ ಒಂದು ಮಿಡ್ ಕೋರ್ಸ್ ಕರೆಕ್ಷನ್ ಎಂದು ಪರಿಗಣಿಸಬೇಕಾಗುತ್ತದೆ. ಹೀಗೆ ನಾವು ಪರಿಗಣಿಸಿದಾಗ, ಮೀಸಲಾತಿಯ ವಿವಿಧ ರೂಪಗಳು ವಿವಿಧ ಸ್ಥರದಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

 

ಉಚ್ಚ ಶಿಕ್ಷಣದಲ್ಲಿ ಮೀಸಲಾತಿಯ ಬಗ್ಗೆ ಚರ್ಚೆ ಪ್ರಾರಂಭಿಸಿದಾಗ ವಿಷಯ ಜಟಿಲವಾಗುತ್ತಾ ಹೋಗುತ್ತದೆ. ಉದಾಹರಣೆಗೆ ಮೀಸಲಾತಿ ನೀತಿಯಿಂದಾಗಿ ವೈದ್ಯಕೀಯ ರಂಗದಲ್ಲಿ ಅಷ್ಟೇನೂ ಉತ್ತಮವಾದ ಮಾರ್ಕುಗಳನ್ನು ಪಡೆಯದವರು ಬಂದು ವೈದ್ಯರಾಗಿಬಿಟ್ಟರೆ ಜನರ ಆರೋಗ್ಯದ ಗತಿಯೇನು ಎಂದು ಪ್ರಶ್ನಿಸುವವರಿದ್ದಾರೆ. ಆದರೆ ಉತ್ತಮ ಮಾರ್ಕುಗಳನ್ನು ಪಡೆಯುವುದೇ ಉತ್ತಮ ಶಸ್ತ್ರಚಿಕಿತ್ಸೆ ಮಾಡುವ ಕೌಶಲ್ಯವನ್ನು ನೀಡುವುದೇ? ರಾಜಕೀಯ ಶಾಸ್ತ್ರ ಓದಿದವರೆಲ್ಲಾ ಉತ್ತಮ ರಾಜಕಾರಣಿಗಳೂ, ಪತ್ರಿಕೋದ್ಯಮದಲ್ಲಿ ಡಿಗ್ರಿ ಮಾಡಿದವರೆಲ್ಲಾ ಉತ್ತಮ ಪತ್ರಕರ್ತರೂ, ಎಂ.ಬಿ. ಗಳೆಲ್ಲಾ ಉತ್ತಮ ಆಡಳಿತಗಾರರೂ ಆಗಬೇಕೆಂದೇನೂ ಇಲ್ಲ. ಎಂ.ಬಿ,. ಡಿಗ್ರಿಯೇ ಉತ್ತಮ ಆಡಳಿತಕ್ಕೆ ದ್ಯೋತಕವಾಗಿದ್ದರೆ, ಎನ್ರಾನ್, ವರ್ಲ್ಡ್ಕಾಂ ಥರದ ಘಟನೆಗಳು ನಡೆಯದಿರಬೇಕಿತ್ತು. ಹೀಗಾಗಿ ಕ್ಷಮತೆಗೂ-ವಿದ್ಯೆಗೂ, ವಿದ್ಯೆಗೂ-ಕಾರ್ಯಕುಶಲತೆಗೂ, ಕಾರ್ಯಕುಶಲತೆಗೂ-ಶ್ರೀಮಂತಿಕೆಗೂ, ಶ್ರೀಮಂತಿಕೆಗೂ-ಕ್ಷಮತೆಗೂ ನಾವು ಇಲ್ಲದ ಸಂಬಂಧಗಳನ್ನು ಹುಡುಕುತ್ತಾ ಗೋಲ್ ಗೋಲ್ ಸುತ್ತುತ್ತೇವೆ.

 

ಹೀಗಾಗಿ ೨೭% ಮೀಸಲಾತಿಯ ತೀರ್ಪು ಸ್ವಾಗತಾರ್ಹವೇ ಸರಿ. ಇದರಿಂದ ಎಲ್ಲೋ ಮಧ್ಯದಲ್ಲಿ ಅವಕಾಶಕ್ಕೆ ವಂಚಿತರಾದ ಕೆಲವರಿಗಾದರೂ ಮತ್ತೆ ಅವಕಾಶ ನೀಡಿದಂತಾಗುತ್ತದೆ. ಯಾರಿಗಾದರೂ ಹೀಗೆ ಅವಕಾಶ ನೀಡಿದಾಗ, ಅವಕಾಶವ ನಿರ್ದಿಷ್ಟವಾದ ಸೀಟುಗಳಿಂದ ಬಂದಾಗ ಮತ್ತೊಬ್ಬರ ಸಹಜ ಅವಕಾಶದ ವಂಚನೆಯ ಮೂಲವಾಗಿ ಬರುತ್ತದೆ. ಜಟಾಪಟಿ ಉಂಟಾಗಿರುವುದರ ಹಿನ್ನೆಲೆ ಇಂತಿದೆ: ಮನುಷ್ಯರಲ್ಲಿ ಜಾತಿ, ಕುಲ, ಆರ್ಥಿಕ ಸ್ಥರಗಳ ವ್ಯತ್ಯಾಸವಿರುವಂತೆಯೇ ವಿದ್ಯಾಸಂಸ್ಥೆಗಳಲ್ಲೂ ರೀತಿಯ ವ್ಯತ್ಯಾಸಗಳಿವೆ. ಇಂಜಿನಿಯರಿಂಗ್ ಕ್ಷೇತ್ರಕ್ಕೆ ಬಂದರೆ ಐಐಟಿ, ಐಟಿ-ಬಿಎಚ್ಯು, ಬಿಟ್ಸ್ ಪಿಲಾನಿ, ಧನ್ಬಾದ್ ಶಾಲೆ, ಎನ್..ಟಿಗಳು, ಮತ್ತು ಇತರ ಇಂಜಿನಿಯರಿಂಗ್ ಕಾಲೇಜುಗಳೆಂಬ ಜಾತಿಪಂಥವಿದೆ. ಪಂಥದಲ್ಲಿ ಐಐಟಿಗಳಲ್ಲಿ ಓದಲು ಸಿಕ್ಕರೆ ಲಾಟರಿ ಹೊಡದಂತೆ ಅನ್ನುವ ನಂಬಿಕೆಯಿದೆ. ಕಾರಣ: ಕ್ಷೇತ್ರದಲ್ಲಿನ ಉತ್ತಮ ನೌಕರಿಗಳು ಅಲ್ಲಿನ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಹೀಗಾಗಿ ಅಲ್ಲಿಗೆ ಹೋಗಲು ಜನ ಪೈಪೋಟಿಯಿಂದ ಕಾದಾಡುತ್ತಾರೆ. ಮೇಲೆ ನಮೂದಿಸಿದ ಎಲ್ಲ ಸಂಸ್ಥೆಗಳೂ ಒಂದೇ ಸ್ಥರದಲ್ಲಿ ಇದ್ದಿದ್ದರೆ, ಎಲ್ಲಿಂದ ಬಂದರೂ ಸಮಾನಾವಕಾಶ ಎನ್ನುವುದಿದ್ದರೆ ಇಷ್ಟು ಜಟಾಪಟಿಯಾಗಲೀ ಕಾದಾಟವಾಗಲೀ ಆಗುತ್ತಿರಲಿಲ್ಲ. ಆದರೆ ನಾವು ಸಾಮಾನ್ಯವಾಗಿ ನೋಡುವುದು, ನಮಗೆ ಮೀಡಿಯಾದ ಕೃಪೆಯಿಂದ ದರ್ಶನವಾಗುವುದು ಸಫಲವಾದ ವಿದ್ಯಾರ್ಥಿಗಳ ಯಶೋಗಾಥೆ ಮಾತ್ರ. ಐಐಟಿಗಳಿಂದ ಪಾಸಾಗಿ ಜೀವನದಲ್ಲಿ ಅತ್ಯುತ್ತಮ ನೌಕರಿ ಪಡೆಯದಿರುವುದೆಷ್ಟು ಮಂದಿ? ಅಥವಾ ಐಐಟಿ/ಐಐಎಂ ನಂತಹ ಸಂಸ್ಥೆಗಳಲ್ಲಿ ಅವಕಾಶ ಸಿಕ್ಕದ, ಅಥವಾ ಸಿಕ್ಕಿಯೂ ಅಲ್ಲಿ ಓದದ ಸಫಲ ಕೆರಿಯರ್ ಕಂಡುಕೊಂಡ ಮಂದಿ ಎಷ್ಟು?

 

ನಮ್ಮ ಮಂತ್ರಿಮಂಡಲವನ್ನೇ ತೆಗೆದುಕೊಳ್ಳಿ. ಮಣಿಶಂಕರ್ ಐಯ್ಯರ್ ಓದಿರುವುದು ಡೂನ್ ಸ್ಕೂಲಿನಲ್ಲಿ, ನಂತರ ಬಹುಶಃ ಸ್ಟೀವನ್ಸ್ ಕಾಲೇಜಿನಲ್ಲಿ. ಚಿದಂಬರಂ ಹಾರ್ವರ್ಡ್ನಲ್ಲಿ, ಜೈರಾಮ್ ರಮೇಶ್ ಐಐಟಿಯಲ್ಲಿ. ಲಾಲೂ ಎಲ್ಲಿ ಓದಿರಬಹುದು? ಎಲ್ಲರೂ ಮಂತ್ರಿಗಳು. ಲಾಲೂ ಹಾರ್ವರ್ಡ್, ಐಐಎಂಗಳಲ್ಲಿ ಪಾಠಮಾಡಿಬಂದರು. ಮಿಕ್ಕವರು ಯಾರಿಗೂ ಅವಕಾಶ ಸಲ್ಲಲಿಲ್ಲ! ಹಾಗೆ ನೋಡಿದರೆ ಲಾಲೂ ಬಿಹಾರದ [ನೇರ ಮತ್ತು ಹಿನ್ನೆಲೆಯ] ಮುಖ್ಯಮಂತ್ರಿಯಾಗಿದ್ದಾಗ ರಾಜ್ಯವನ್ನು ನಾಶನಮಾಡಿದರೆಂದು ನಂಬಿದ ಮೀಡಿಯಾ, ರೈಲ್ವೇ ಮಂತ್ರಿ ಲಾಲೂ ಬಗ್ಗೆ ಮಾತುಗಳನ್ನು ಆಡಲು ಸಾಧ್ಯವಿಲ್ಲ. ಹೀಗಾಗಿ ನಮಗೆ ವ್ಯಕ್ತಿ ಕೆಲವು ಸಂದರ್ಭಗಳಲ್ಲಿ ಫೇಲಾದರೂ, ಮತ್ತೆ ಕೆಲವು ಸಂದರ್ಭಗಳಲ್ಲಿ ಮಿಂಚಬಹುದು. ಆದರೆ ಮಿಂಚಲು ಅವಕಾಶ ಸಿಗಬೇಕಷ್ಟೇ. ಉತ್ತಮ ವಿದ್ಯಾಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಕ್ಕರೆ, ಮಿಂಚಲು ಸಾಧ್ಯವಾಗುವ ಒಂದು ಅವಕಾಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ. ಸಹಜ ಕ್ಷಮತೆ ಇರುವವರು ಸಂದರ್ಭವನ್ನು ತಾವೇ ನಿರ್ಮಿಸಿಕೊಳ್ಳುವ ಸಾಧ್ಯತೆ ಹೆಚ್ಚು. ನಾವು ವಾದಸರಣಿಯಲ್ಲಿ ಹೋದಾಗ ಹೆಚ್ಚಿನ ಕ್ಷಮತೆಯಿರಬಹುದಾದ ಮೇಲ್ವರ್ಗದ ವಿದ್ಯಾರ್ಥಿಗೆ ಸಹಜವಾಗಿ ಬರುತ್ತಿದ್ದ ಉನ್ನತ ಶಿಕ್ಷ್ಣಣದ ಸೀಟು ಮೀಸಲಾತಿಯ ಮೂಲಕ ಬೇರೊಬ್ಬರಿಗೆ ಹೋದರೆ ಒಂದು ಸಮಾಜದ ಸ್ಥರದಲ್ಲಿ ಅಷ್ಟೇನೂ ದುಃಖ ಪಡುವ ಕಾರಣವಿಲ್ಲವೇನೋ.

 

ಧೀರೂಭಾಯಿ ಅಂಬಾನಿ, ಬಿಲ್ ಗೇಟ್ಸ್, ಲ್ಯಾರೀ ಪೇಜ್, ನಾರಯಣ ಮೂರ್ತಿ ಯಾರೂ ಎಂ.ಬಿ. ಮಾಡಿದವರಲ್ಲ, ಆದರೂ ಅದ್ಭುತವಾಗಿ ತಮ್ಮ ಧಂಧೆ ನಡೆಸಿದರು. ಷಾ ರೂಕ್ ಖಾನ್, ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ ಫಿಲಂ ಇನ್ಸ್ಟಿಟ್ಯೂಟಿಗೆ ಹೋದವರಲ್ಲ. ಆಡ್ ಲೋಕದ ಪ್ರಸೂನ್ ಜೋಷಿ ಓದಿದ್ದು ಐಐಎಂನಲ್ಲಿ ಅಲ್ಲ - ಅವರ ವಿದ್ಯಾಭ್ಯಾಸವಾದದ್ದು ಆಡ್ ಲೋಕಕ್ಕೆ ಸಂಬಂಧಿಸಿದ ಮುದ್ರಾ ಇನ್ಸ್ಟಿಟ್ಯೂಟಿನಲ್ಲೂ ಅಲ್ಲ - ಅವರು ಓದಿದ್ದು ಘಾಜಿಯಾಬಾದ್ ಐಎಂಟಿ ಅನ್ನುವ ಸಂಸ್ಥೆಯಲ್ಲಿ. ವಾಲ್ ಸ್ಟ್ರೀಟ್ ಜರ್ನಲ್ ಯುರೋಪಿನ ಎಡಿಷನ್ಗೆ ಸಂಪಾದಕರಾಗಿದ್ದು ಇಂದು ಭಾರತದಲ್ಲಿ ಮಿಂಟ್ ಎಂಬ ಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ರಾಜು ನಾರಿಸೆಟ್ಟಿ ಓದಿದ್ದು ಕುರಿಯನ್ ಸ್ಥಾಪಿಸಿದ ಗ್ರಮೀಣ ನಿರ್ವಹಣೆಯ ಸಂಸ್ಥೆ ಇರ್ಮಾದಲ್ಲಿ. ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣದಿಂದೆತ್ತಣ ಸಂಬಂಧವಯ್ಯಾ?

 

ಹೀಗಾಗಿ ಮೀಸಲಾತಿಯ ಬಗ್ಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರತಿಕ್ರಿಯಗಳನ್ನು [ಮಂಡಲ್ ಆಯೋಗವನ್ನು ಅಮಲುಗೊಳಿಸಬೇಕೆಂದು ವಿ.ಪಿ.ಸಿಂಗ್ ನಿರ್ಧರಿಸಿದಾಗ ರಾಜೀವ್ ಗೋಸ್ವಾಮಿಯಂಥಹ] ಕೆಲ ಉತ್ಸಾಹೀ ಯುವಕರು ತೋರಿಸಿದಾಗ ಇದೆಲ್ಲಾ ಯಾಕೆ ಅಂತ ನನಗೆ ಅನ್ನಿಸುವುದುಂಟು. ಮೀಸಲಾತಿ ಇರಬೇಕೇ? ನಿಜವಾದ ಸಮಬಾಳಿನ ಲೋಕದಲ್ಲಿ ಮೀಸಲಾತಿಯೇ ಇರಬಾರದು. ಮೀಸಲಾತಿಯಿರಬಾರದು ಅಂದರೆ ಅಷ್ಟು ಭಿನ್ನ ಮತ್ತು ಭರಪೂರ ಅವಕಾಶಗಳಿರಬೇಕು. ರೈಲಿನ ಟಿಕೆಟ್ಟನ್ನು ನಾವು ಕಾಯ್ದಿರಿಸುತ್ತೇವೆ. ಆದರೆ ಆಟೊ ಹತ್ತಬೇಕೆಂದರೆ ನಮಗೆ ಬೇಕಾದಾಗ ಸಿಗುತ್ತದೆ. ಮಧ್ಯ ಹೆಚ್ಚಿನಂಶ ವಿಮಾನಯಾನಕ್ಕೂ ಭಿನ್ನ ಅವಕಾಶಗಳಿವೆ. ವಿದ್ಯೆಗೂ ಇಂಥ ಉತ್ತಮ ಅವಕಾಶಗಳಿರಬೇಕು. ಪ್ರತಿ ಸಂಸ್ಥೆಯೂ ಉತ್ತಮ ಗುಣಮಟ್ಟದ ಗುರಿಯನ್ನು ಹೊಂದಿ ನಿಟ್ಟಿನಲ್ಲಿ ನಡೆದಷ್ಟೂ ಮೀಸಲಾತಿಯ ಅವಶ್ಯಕತೆ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಕನಸು ನನಸಾಗುವವರೆಗೂ, ಜಟಾಪಟಿ ಇದ್ದೇ ಇರುತ್ತದೆ.

 

೨೪ ಏಪ್ರಿಲ್ ೨೦೦೮


Labels: 

No comments: